ಶುಕ್ರವಾರ, ನವೆಂಬರ್ 8, 2013

ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು!



ನವೆಂಬರ್ ಒಂದು ಕರ್ನಾಟಕದ ಹುಟ್ಟುಹಬ್ಬ. ೧೯೫೬ ನೇ ಇಸವಿಯ ಇದೇ ದಿನ ಮೈಸೂರು ರಾಜ್ಯವಾಗಿ ಕರ್ನಾಟಕ ಹುಟ್ಟಿ ೧೯೭೩ ರ ನವೆಂಬರ್ ಒಂದರಂದು ಕರ್ನಾಟಕವೆಂದು ಮರುನಾಮಕರಣವಾಯಿತು. ಈ ದಿನವನ್ನು ಕರ್ನಾಟಕದೆಲ್ಲೆಡೆ ಕನ್ನಡ ಬಾವುಟವೇರಿಸಿ ಕನ್ನಡ ರಾಜ್ಯೋತ್ಸವ ಎಂಬ ಹೆಸರಿನಿಂದ ಹೆಮ್ಮೆಯಿಂದ ಕನ್ನಡಿಗರೆಲ್ಲರೂ ಆಚರಿಸುತ್ತಾರೆ. ನವೆಂಬರ್ ತಿಂಗಳನ್ನು ಕನ್ನಡ ಮಾಸ ಅಂತ ಕರೆಯುವ ಚಂದದ ರೂಢಿಯೂ ಇದೆ. ಈ ನವೆಂಬರ್ ಒಂದಕ್ಕೆ ಒಂದು ಸುಂದರ ಇತಿಹಾಸವೂ ಇದೆ.

ಇತಿಹಾಸ

ಕನ್ನಡನಾಡು ವಿವಿಧ ಪ್ರಾಂತಗಳಲ್ಲಿ ಚದುರಿ ಹೋಗಿತ್ತು. ಕ್ರಿ.. ೯ ನೆಯ ಶತಮಾನದ ರಾಷ್ಟ್ರಕೂಟರ ಕಾಲದಲ್ಲಿಯೇ, ’ಕವಿರಾಜಮಾರ್ಗ ಕೃತಿಯಲ್ಲಿಯೇ ಕಾವೇರಿಯಿಂದ ಮಾ ಗೋದಾವರಿವರಮಿರ್ದ ನಾಡುಅಂತ ಬಣ್ಣಿಸಲ್ಪಟ್ಟಿತ್ತು. ಭಾಷಾವಾರು ಪ್ರಾಂತಗಳ ಪ್ರಕಾರ ಕನ್ನಡ ಭಾಷಿಗರ ರಾಜ್ಯವಾಗಬೇಕು, ಪ್ರಾಂತಗಳ ಏಕೀಕರಣದ ಕೊಹಳೆ ಮೊದಲು ಆಲೂರು ವೆಂಕಟರಾಯರು ೧೯೦೫ರಲ್ಲಿ ಧಾರಾವಾಡ ಕರ್ನಾಟಕ ವಿದ್ಯಾವರ್ಧಕ ಸಂಘ ಹೊರತರುತ್ತಿದ್ದ ವಾಗ್ಭೂಷಣ ಪತ್ರಿಕೆಯಲ್ಲಿ ಬರೆದ ಲೇಖನವೊಂದರಿಂದ ಶುರು ಹಚ್ಚಿದ್ದು ಮುಂದೆ ಕಾಲಕಳೆದಂತೆ ಅದು ಬಹಳ ಜನಾಂದೋಲನವನ್ನು ಹುಟ್ಟುಹಾಕಿತು. ಶ್ರೀರಂಗ, ಅದರಗುಂಚಿ ಶಂಕರೇಗೌಡ ಪಾಟೀಲರು, ಮುಂಡಗೋಡಿನ ನಾರಾಯಣ ಪೈ, ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿ ಮುಂತಾದ ನೂರಾರು ಕನ್ನಡಿಗರು ಈ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದರು. ಕಟ್ಟಾ ಕನ್ನಡ ಪ್ರೇಮಿಯಾಗಿದ್ದ ರಂಜಾನ್ ಸಾಹೇಬ್ ಕನ್ನಡ ಏಕೀಕರಣದ ಹೋರಾಟದಲ್ಲಿ ಬಲಿಯಾದರು. ಕನ್ನಡಿಗರೆಲ್ಲರೂ ಅದಕ್ಕೆ ಅನುಮೋದನೆ ನೀಡಿ ಈ ಕುರಿತು ನಡೆದ ಚಳವಳಿಗೆ ತಮ್ಮ ಬೆಂಬಲ ನೀಡತೊಡಗಿದರು.

ಹುಟ್ಟುವ ಮುನ್ನ

೧೯೫೫ರ ಅಕ್ಟೋಬರ್ ೧೦ಕ್ಕೆ ಫಜಲ್ ಅಲಿ ನೇತೃತ್ವದ ರಾಜ್ಯ ಪುನರ್ವಿಂಗಡಣಾ ಆಯೋಗ, ನೆಹರೂ ಮುಂದಾಳುತ್ವದ ಕೇಂದ್ರ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತು. ಆ ವರದಿಯಲ್ಲಿ ಭಾರತವನ್ನು ೧೯ ರಾಜ್ಯಗಳನ್ನಾಗಿಯೂ ಮೂರು ಕೇಂದ್ರಾಡಳಿತ ಪ್ರದೇಶಗಳನ್ನಾಗಿಯೂ ವಿಂಗಡಿಸಲಾಗಿತ್ತು.

ರಾಜ್ಯ ಪುನರ್ವಿಂಗಡಣಾ ಆಯೋಗವು ಈ ಕೆಳಗಿನ ಭಾಗಗಳನ್ನು ಸೇರಿಸಿ ಕರ್ನಾಟಕ ರಾಜ್ಯ ರಚನೆಗೆ ಶಿಫಾರಸು ಮಾಡಿತ್ತು :-

. ತುಂಗಭದ್ರಾ ಅಣೆಕಟ್ಟಿರುವ ಮಲ್ಲಾಪುರ ಉಪ ತಲ್ಲೂಕಿನ ಸ್ವಲ್ಪ ಭಾಗಗಳನ್ನು ಬಿಟ್ಟು ಹಾಲಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸಿರಗುಪ್ಪ, ಹೊಸಪೇಟೆ ತಾಲ್ಲೂಕು ಮತ್ತು ಇಡೀ ಮೈಸೂರು ಪ್ರಾಂತ

. ಮುಂಬಯಿ ರಾಜ್ಯದ ದಕ್ಷಿಣ ಧಾರಾವಾಡ, ಬಿಜಾಪುರ, ಉತ್ತರ ಕನ್ನಡ ಜಿಲ್ಲೆಗಳು ಮತ್ತು ಚಾಂದಗಢ ತಾಲ್ಲೂಕನ್ನುಳಿದು ಬೆಳಗಾವಿ ಜಿಲ್ಲೆ.

. ರಾಯಚೂರು ಮತ್ತು ಗುಲ್ಬರ್ಗಾ ಜಿಲ್ಲೆಗಳು

. ಕಾಸರಗೋಡು ತಲ್ಲೂಕನ್ನುಳಿದು ದಕ್ಷಿಣ ಕನ್ನಡ ಜಿಲ್ಲೆ.

. ಮದ್ರಾಸ್ ರಾಜ್ಯದ ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು

. ಕೊಡಗು.

 ಈ ಆಯೋಗದ ಶಿಫಾರಸು ಕನ್ನಡ ಏಕೀಕರಣ ಚಳವಳಿಯ ಅನುಯಾಯಿಗಳಿಗೆ ನಿರಾಸೆಯುಂಟುಮಾಡಿತು. ಮೈಸೂರು ರಾಜ್ಯಕ್ಕೇ ಸೇರಿದ್ದ ಕಾಸರಗೋಡನ್ನು ಆಯೋಗವು ಕರ್ನಾಟಕಕ್ಕೆ ಸೇರಿಸಿರಲಿಲ್ಲ. ಅಲ್ಲದೇ, ನೀಲಗಿರಿ, ಸೇಲಂ, ಧರ್ಮಪುರಿ, ಅಕ್ಕಲಕೋಟೆ, ಸೊಲ್ಲಾಪುರ, ಮಡಕಶಿರಾ ಮುಂತಾದವುಗಳೂ ಆಯೋಗದ ಕರ್ನಾಟಕದಲ್ಲಿ ಸ್ಥಾನ ಪಡೆದಿರಲಿಲ್ಲ. ಹಾಗಾಗಿ ಈ ಆಯೋಗದ ವರದಿಯ ವಿರುದ್ಧ ಚಳವಳಿಗಳು ಶುರುವಾದವು. ಮೊದಲು ಹುಬ್ಬಳ್ಳಿ ಮುಂದೆ ಬಳ್ಳಾರಿಯಲ್ಲೂ ವಿರೋಧದ ಕಿಚ್ಚು ಆರಂಭವಾಯಿತು. ಕಾಸರಗೋಡು ಕರ್ನಾಟಕಕ್ಕೆ ಸೇರದ ವಿಷಯದಲ್ಲೇ ಅಲ್ಲಿನ ಮತ್ತು ಕನ್ನಡದ ಮಹತ್ವದ ಕವಿಗಳಾದ ಕೈಯಾರ ಕಿಂಞಣ್ಣ ರೈಯವರು ಬೆಂಕಿ ಬಿದ್ದರೆ ಮನೆಗೆಕವಿತೆ ರಚಿಸಿ ತಮ್ಮ ಮನದಾಳದ ಮಾತುಗಳನ್ನು ತೋಡಿ, ಆ ಕಾಲದ, ಆ ಜಾಗದ ಜನತೆಯ ಒಳದನಿಯೂ ಆದರು. ಬಳ್ಳಾರಿಯಲ್ಲಿ ತಮ್ಮ ಪ್ರಾಂತದ ಭಾಗಗಳು ತಮ್ಮಲ್ಲೇ ಉಳಿಯಬೇಕೆಂಬ ಆಶಯದಿಂದ ಸಿರಗುಪ್ಪಾ ತಾಲ್ಲೂಕಿನ ಕೊಂಚೆಗೇರಿಯಲ್ಲಿ ನೀರಿನ ಸತ್ಯಾಗ್ರಹ ಪ್ರಾರಂಭವಾದವು. ಕೇಂದ್ರ ಸರ್ಕಾರದ ಆಶ್ವಾಸನೆ ಮೂಲಕ ಆ ಸಮಸ್ಯೆ ಇತ್ಯರ್ಥವಾಗಿ ಸತ್ಯಾಗ್ರಹ ನಿಂತಿತು.

೧೯೫೫ರ ಡಿಸೆಂಬರ್ ನಲ್ಲಿ ಮೈಸೂರು ವಿಧಾನ ಸಭೆಯು ಕರ್ನಾಟಕ ರಾಜ್ಯ ರಚನೆಯಾಗಬೇಕೆಂದು ಗೊತ್ತುವಳಿ ಸ್ವೀಕರಿಸಿದಾಗ ಪರವಾಗಿ ೫೭ ಸದಸ್ಯರೂ, ವಿರೋಧವಾಗಿ ೩ ಮತ್ತು ತಟಸ್ಥವಾಗಿ ೩೫ ಸದಸ್ಯರೂ ಮತ ಚಲಾಯಿಸಿದರು. ಮುಂದೆ ದೆಹಲಿಯಲ್ಲಿ ನಡೆದ ಸಭೆಯೊಂದರಲ್ಲಿ ಬಳ್ಳಾರಿ ಜಿಲ್ಲೆಯನ್ನು ಮೈಸೂರು ರಾಜ್ಯದಲ್ಲೇ ಉಳಿಸಿಕೊಳ್ಳಲು ಆಂಧ್ರದ ನಾಯಕರು ಒಪ್ಪಿದರು ಜೊತೆಗೆ ರಾಯಚೂರಿನ ಗದ್ದಾಲ್ ಮತ್ತು ಆಲಂಪುರವನ್ನು ಆಂಧ್ರಕ್ಕೆ ಬಿಟ್ಟುಕೊಡಲು ಒಪ್ಪಿತವಾಯಿತು. ೧೯೫೬ರ ಜನವರಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ದೆಹಲಿಯಲ್ಲಿ ಸಭೆ ಸೇರಿ ಏಕೀಕರಣದ ವರದಿಗಳನ್ನು ಸಮಾಲೋಚಿಸಿ ಬೀದರ್ ಜಿಲ್ಲೆ, ಬಳ್ಳಾರಿ ಮತ್ತು ಕಾಸರಗೋಡಿನ ಚಂದ್ರಗಿರಿ ನದ್ಯ ಉತ್ತರ ಭಾಗವನ್ನು ಮೈಸೂರಿಗೆ ಸೇರಿಸಲು ಒಪ್ಪಿಗೆ ನೀಡಿತು.

ಈ ವಿಷಯದಲ್ಲಿ ಸಂಸತ್ತಿನಲ್ಲೂ ಚರ್ಚೆಗಳು ನಡೆದು ೧೯೫೬ ರ ಮಾರ್ಚ್ ನಲ್ಲಿ ವಿಧೇಯಕ ಪ್ರಕಟವಾಯಿತು. ಈ ವಿಧೇಯಕದ ಪ್ರಕಾರ :-

. ಇಡಿಯಾಗಿ ಮೈಸೂರು ರಾಜ್ಯ

. ಮುಂಬಯಿ ರಾಜ್ಯದ ಬಿಜಾಪುರ, ಧಾರಾವಾಡ, ಉತ್ತರ ಕನ್ನಡ ಮತ್ತು ಬೆಳಗಾವಿ (ಚಾಂದಗಡ ತಾಲ್ಲೂಕನ್ನು ಹೊರತು ಪಡಿಸಿ)

. ಹೈದರಾಬಾದ್ ರಾಜ್ಯದ ಗುಲ್ಬರ್ಗಾ ಜಿಲ್ಲೆ (ಕೋಡಂಗಲ್ ಮತ್ತು ತಾಂಡೂರ್ ತಾಲ್ಲೂಕನ್ನು ಬಿಟ್ಟು) ರಾಯಚೂರು ಜಿಲ್ಲೆ ( ಆಲಂಪುರ ಮತ್ತು ಗದ್ದಾಲ್ ಹೊರತು ಪಡಿಸಿ) ಬೀದರ್ ಜಿಲ್ಲೆಯ ಬೀದರ್, ಬಾಲ್ಕಿ, ಔರಾಬಾದ್ ಮತ್ತು ಹುಮನಾಬಾದ್ ತಾಲ್ಲೂಕ್ ಗಳು

. ಮದ್ರಾಸ್ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ (ಕಾಸರಗೋಡು ಮತ್ತು ಅಮೀನ್ ದ್ವೀಪವನ್ನು ಹೊರತು ಪಡಿಸಿ) ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕ್.

. ಕೊಡಗು ಜಿಲ್ಲೆ.

ರಾಜ್ಯ ಪುನರ್ವಿಂಗಡಣಾ ಆಯೋಗದ ಪ್ರಕಾರ ಗದ್ವಾಲ್ ಪ್ರದೇಶ ಕರ್ನಾಟಕಕ್ಕೂ, ಬಸವಕಲ್ಯಾಣ ಮಹಾರಾಷ್ಟ್ರಕ್ಕೂ ಸೇರಬೇಕಾಗಿತ್ತು. ಆದರೆ ಆಂಧ್ರ, ಮಹಾರಾಷ್ಟ್ರ, ಕರ್ನಾಟಕ ರಾಜ್ಯದ ನಾಯಕರ ಸಮಾಲೋಚನೆ ಚರ್ಚೆಯ ಬಳಿಕ, ಬಸವಕಲ್ಯಾಣ ಕರ್ನಾಟಕಕ್ಕೂ, ಗದ್ವಾಲ್ ಮಹಾರಾಷ್ಟ್ರಕ್ಕೂ ಸೇರಲ್ಪಟ್ಟಿತು.

ಕೊನೆಗೆ ೧೯೫೬ ರಲ್ಲಿ ಮೈಸೂರು ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ವಿಶಾಲ ಮೈಸೂರು ರಾಜ್ಯದ ಉದ್ಘಾಟನೆ ಮಾಡಿದರು. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಎಸ್. ನಿಜಲಿಂಗಪ್ಪನವರೂ, ರಾಜ್ಯಪಾಲರಾಗಿ ಜಯಚಾಮರಾಜೇಂದ್ರ ಒಡೆಯರ್ ಅಧಿಕಾರ ಸ್ವೀಕರಿಸಿದರು.

೧೯೭೩ ರ ನವೆಂಬರ್ ಒಂದರಂದು ಮೈಸೂರು ರಾಜ್ಯಕ್ಕೆ ಕರ್ನಾಟಕವೆಂಬ ಮರು ನಾಮಕರಣ ನಡೆಯಿತು.

ಹೀಗೆ ನವೆಂಬರ್ ಒಂದು ಎಂಬುದು ಕರ್ನಾಟಕಕ್ಕೆ, ಕನ್ನಡಕ್ಕೆ ಒಂದು ಹಿರಿಮೆಯ, ಹೆಮ್ಮೆಯ, ಸದಾ ನೆನಪಲ್ಲಿಡಬೇಕಾಗಿರುವ ದಿನ.

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡದ ಸೊಲ್ಲು ಬರಿಯ ನವೆಂಬರ್ ನ ಕನ್ನಡ ಮಾಸಕ್ಕಷ್ಟೇ ಸೀಮಿತವಾಗದೇ ನಮ್ಮ ಒಳಮಾತು ಆಗಬೇಕು. ಭಾಷೆ ನಮ್ಮ ಒಳಗನ್ನು ಬೆಳಗುವ ಸೋಜಿಗವಾಗುವ ಸುಖ ಪಡೆಯಬೇಕು. ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ.. ಕನ್ನಡ ಎಂದು ಬರೆದ ಹಂಸಲೇಖಾ ಉಕ್ತಿ ನಿಜವಾಗಬೇಕಾದ ಸಮಯ ಇದು. ವ್ಯಾವಹಾರಿಕವಾಗಿ ಇಂಗ್ಲೀಷ್ ಬಳಸಿದರೂ  ಮನೆಯಲ್ಲಿ ಮನದಲ್ಲಿ ಮಾತಾಡಬೇಕಾದ ಭಾಷೆ ಕನ್ನಡ ಎಂಬುವುದನ್ನು ಕರುನಾಡ ಹುಟ್ಟುಹಬ್ಬದ ದಿನವಾದರೂ ಪಾಲಿಸಿದರೆ ಈ ಮಣ್ಣಿನ ಋಣವನ್ನು ಕೊಂಚ ಸಲ್ಲಿಸಿದ ಹಾಗಾದೀತು. ಪರಮವಾದದ್ದನ್ನು ಪೊರೆಯುವುದು ಪರಂಪರೆ, ಅಂಥ ಪರಮವಾದ ಭಾಷೆ, ಪರಮವಾದ ಸಂಸ್ಕೃತಿ ಕನ್ನಡದ್ದು. ಉಳಿಸಿ, ಬೆಳೆಸೋಣ.

 
(ಅಂಕಿ-ಅಂಶ, ವಿವರದ ಸಹಾಯ : ’ಕರ್ನಾಟಕ ಏಕೀಕರಣ ಚಳವಳಿಬರೆದವರು ಡಾ. ಎಚ್.ಎಸ್. ಗೋಪಾಲರಾವ್.)

ಮಂಗಳವಾರ, ನವೆಂಬರ್ 5, 2013

ಪೀಠಿಕೆ


ಕರ್ನಾಟಕದ ಉಗಮ ಮತ್ತಿತರ ವಿವರಗಳು
ಕರ್ನಾಟಕ ರಾಜ್ಯವು ಉತ್ತರದಲ್ಲಿ ಗೋದಾವರಿ ಮತ್ತು ದಕ್ಷಿಣದಲ್ಲಿ ಕಾವೇರಿ ನದಿಯ ಮಧ್ಯವಿರುವ ಫಲವತ್ತಾದ ಪ್ರದೇಶವಾಗಿದೆ. ಕರ್ನಾಟಕವನ್ನು ಕರಾವಳಿ, ಮಲೆನಾಡು ಮತ್ತು ಬಯಲು ಪ್ರದೇಶವೆಂದು ಮೂರು ಭಾಗವನ್ನಾಗಿ ಮಾಡಬಹುದು. ಒಟ್ಟೂ ೧೯೧೭೯೧ ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಭಾರತದ ೬% ಪ್ರದೇಶವನ್ನಾವರಿಸಿಕೊಂಡಿದೆ. ಮೊದಲಿಗೆ ಮೈಸೂರು ರಾಜ್ಯವೆಂದು ಕರೆಸಿಕೊಳ್ಳುತ್ತಿದ್ದ ಕರ್ನಾಟಕವು ದಖನ್ ಪ್ರಸ್ಥಭೂಮಿಯ ನೈಋತ್ಯ ಭಾಗವನ್ನು ಆವರಿಸಿಕೊಂಡಿದೆ. ಉತ್ತರದಲಿ ಮಹಾರಾಷ್ಟ್ರ, ಪೂರ್ವದಲಿ ಆಂಧ್ರಪ್ರದೇಶ, ಆಗ್ನೇಯದಲಿ ತಮಿಳುನಾಡು, ನೈಋತ್ಯದಲ್ಲಿ ಕೇರಳ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಮತ್ತು ಗೋವಾ ರಾಜ್ಯದಿಂದ ಸುತ್ತುವರಿದಿದೆ.

ಮೈಸೂರು ರಾಜ್ಯ ಏಕೀಕರಣದೊಂಡಿದ್ದು ನವೆಂಬರ್ ೧ ೧೯೫೬ ರಲ್ಲಿ. ಹದಿನೇಳು ವರುಷದ ಬಳಿಕ ಅಂದರೆ ೧೯೭೩ ನವೆಂಬರ್ ೧ ರಂದು ಆಗಿನ ಮುಖ್ಯಮಂತ್ರಿ ಶ್ರೀ ದೇವರಾಜ್ ಅರಸ್ ನೇತೃತ್ವದಲ್ಲಿ ಕರ್ನಾಟಕವೆಂಬ ಹೆಸರು ಬಂದಿತು.

ಕರ್ನಾಟಕದ ಹವಾಮಾನ ಆಹ್ಲಾದಕರವಾಗಿದ್ದು, ವರ್ಷದ ಎಲ್ಲಾ ಕಾಲದಲ್ಲೂ ಹೆಚ್ಚೇನೂ ತಾಪಮಾನ ಬದಲಾವಣೆಗಳಿಲ್ಲದ ಪ್ರದೇಶವಾಗಿದೆ. ಈ ರಾಜ್ಯ ಕೆಲವು ಶತಮಾನಗಳ ಸಮೃದ್ಧ ಇತಿಹಾಸವನ್ನು ಹೊಂದಿದ್ದು, ಹಲವಾರು ಖ್ಯಾತ ರಾಜರುಗಳಿಂದ ಆಳಲ್ಪಟ್ಟಿದೆ. ಹಲವಾರು ಪ್ರಕೃತಿ ವಿಸ್ಮಯಗಳು, ವಿಶಾಲ ಕರಾವಳಿ, ಪಶ್ಚಿಮ ಘಟ್ಟಗಳಲ್ಲಿನ ಸಮೃದ್ಧ ಹಸಿರು, ವಿಶೇಷವಾದ ಪ್ರಾಣಿಪಕ್ಷಿಗಳು, ಆಯುರ್ವೇದ ಗಿಡಮೂಲಿಕೆಗಳು, ವಾಸ್ತುಶಾಸ್ತ್ರ ತಜ್ಞರಿಂದ ಮಾಡಲ್ಪಟ್ಟ ಇತಿಹಾಸ ಪ್ರಸಿದ್ಧ ದೇವಾಲಯಗಳು, ವಿಶ್ವವಿಖ್ಯಾತ ಜಲಪಾತಗಳು, ಅಣೆಕಟ್ಟುಗಳು, ಕೋಟೆಕೊಪ್ಪಲುಗಳು, ಬೆಟ್ಟ ಗುಡ್ಡಗಳಿಂದಲೂ, ರುದ್ರರಮಣಿಯವೂ, ಸೌಮ್ಯ ಮಧುರ ಸ್ಥಳಗಳಿಂದಲೂ ಒಳಗೂಡಿ, ಪ್ರಕೃತಿಯ ಎಲ್ಲಾ ಪದರುಗಳನ್ನು ಸ್ಪರ್ಶಿಸಿದ ಪ್ರದೇಶವೆಂಬ ಖ್ಯಾತಿ ಪಡೆದಿದೆ. ಚಿನ್ನದ ಅದಿರು ಉತ್ಪಾದನೆಯಲ್ಲೂ ಕರ್ನಾಟಕದ ಹೆಸರು ಮೇಲ್ಪಂಕ್ತಿಯಲ್ಲಿದೆ. ರಾಯಚೂರಿನ ಬಳಿ ಹಟ್ಟಿ ಎಂಬ ಸ್ಥಳ ಚಿನ್ನದದಿರಿನ ಜೊತಗೆ ಬೇರೆ ಹಲವಾರು ಅದಿರುಗಳ ಉತ್ಪಾದನೆಯಲ್ಲಿ ಪ್ರಸಿದ್ಧಿಯಾದುದು. ಒಂದೇ ರಾಜ್ಯದಲ್ಲಿ ವಿಭಿನ್ನ ಸಂಸ್ಕೃತಿಗಳಿವೆ, ಶ್ರೀಗಂಧ ಉತ್ಪಾದನೆಗೆ, ಕಾಫಿ, ಟೀ ಉತ್ಪಾದನೆ, ರೇಷ್ಮೆ ಉದ್ಯಮದಲ್ಲೂ ಕರ್ನಾಟಕ ಹೆಸರು ಮಾಡಿದೆ.

ಭಾಷೆ
ಕರ್ನಾಟಕದ ಭಾಷೆಯಾದ ಕನ್ನಡವೆಂಬುದು ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದದ್ದು.  ಭಾಷೆ ಒಂದೇ ಆದರೂ ಮಾತನಾಡುವ ವಿಧಾನ, ಮತ್ತು ಪದಬಳಕೆಯ ವಿಶಿಷ್ಟತೆಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಕರ್ನಾಟಕ ಪ್ರದೇಶದಂತೆ ಕನ್ನಡ ಭಾಷೆಗೂ ಅತ್ಯಂತ ಸಮೃದ್ಧ ಇತಿಹಾಸವಿದೆ. ಎರಡು ಸಾವಿರ ವರುಷಕ್ಕೂ ಹಿಂದಿನಿಂದಲೂ ಕನ್ನಡ ಭಾಷೆ ಬಳಕೆಯಲ್ಲಿದೆ ಎಂಬುದು ಒಂದು ಅಂದಾಜು. ಇತಿಹಾಸದ ಪ್ರಕಾರ ಕನ್ನಡ ಲಿಪಿಯು ಮೂರನೇ ಶತಮಾನದಲ್ಲಿದ್ದ ಬ್ರಾಹ್ಮಿ ಲಿಪಿಯನ್ನು ಉತ್ತಮಗೊಳಿಸಿ ೫ನೇ ಶತಮಾನದಲ್ಲಿ ಕದಂಬರು ಬಳಸಲು ಪ್ರಾರಂಭಿಸಿದ್ದರು. ಕನ್ನಡ ಭಾಷಾಬಳಕೆಯ ಪ್ರಥಮ ದಾಖಲೆಯೆಂದರೆ ಹಲ್ಮಿಡಿ ಶಾಸನ, ಕ್ರಿಸ್ತ ಪೂರ್ವ ೪೫೦ರದ್ದು. ದೊರೆತ ಮೊದಲ ಕನ್ನಡ ಪುಸ್ತಕ ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ’ಕವಿರಾಜಮಾರ್ಗ’.

ಕನ್ನಡ ಭಾಷೆಯ ಬೆಳವಣಿಗೆಯನ್ನು ಐದು ಘಟ್ಟದಲ್ಲಿ ವಿಂಗಡಿಸಬಹುದು. ಪೂರ್ವ ಹಳೆಗನ್ನಡ (೫ನೇ ಶತಮಾನ), ಹಳೆಗನ್ನಡ ( ಕ್ರಿಸ್ತ ಶಕ ೯೦೦ – ಕ್ರಿ.ಶ. ೧೨೦೦) ನಡುಗನ್ನಡ ( ಕ್ರಿ.ಶ. ೧೨೦೦ – ೧೭೦೦ ) , ಹೊಸಗನ್ನಡ (ಕ್ರಿ. ಶ. ೧೭೦೦ ರಿಂದ ಈಗಿನವರೆಗೆ.

ಕನ್ನಡ ನಾಡನ್ನು ಆಳಿದ ಮಹಾರಾಜರು, ಪಂಡಿತರು, ಕವಿಮಾನ್ಯರು, ಲೀಖಕರು, ಶಿಲ್ಪಿಗಳು, ಕಲೆಗಾರರು, ಮತ್ತು ಜನಪದ ಸಾಹಿತ್ಯವನ್ನು ಸೃಷ್ಟಿಸಿದ ಜನಸಾಮಾನ್ಯರು ಕನ್ನಡ ಭಾಷೆಯ ಉನ್ನತಿಗೆ ಸಹಾಯ ಮಾಡಿ, ಈಗ ನಾವೆಲ್ಲರೂ ಹೆಮ್ಮೆ ಪಡುವಂಥ ಕನ್ನಡ ಭಾಷೆಗೆ ಕಾರಣೀಕರ್ತರಾಗಿದ್ದಾರೆ. ಏಳು ಜ್ಞಾನಪೀಠ ಪ್ರಶಸ್ತಿಗಳನ್ನು ಬಾಚಿಕೊಂಡು ಭಾರತದಲ್ಲೇ ಬೇರ್ಯಾವ ಭಾಷೆಯೂ ಮಾಡದಂಥ ಸಾಧನೆ ಮಾಡಿದೆ. ಸಾಹಿತ್ಯದಲ್ಲಿ ವಿಶ್ವವೇ ತಿರುಗಿ ನೋಡುವಂಥ ಸಮೃದ್ಧತೆಯನ್ನು ಹೊಂದಿದೆ.

ಭಾರತದ ೨೨ ಅಧಿಕೃತ ರಾಷ್ಟ್ರಭಾಷೆಯಲ್ಲಿ ಕನ್ನಡಕ್ಕೂ ಮಾನ್ಯತೆ ದೊರಕಿದ್ದು, ಮತ್ತು ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರಕಿದ್ದು ಅಕ್ಟೋಬರ್ ೩೧, ೨೦೦೮ ರಲ್ಲಿ.
ಇಂಥ ಒಂದು ಸಮೃದ್ಧ ಭಾಷೆಯನ್ನು ಉಳಿಸಿ, ಬೆಳೆಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಕನ್ನಡ ಡಿಂಡಿಮದ ಬಗ್ಗೆ
ಈ ಕನ್ನಡ ಡಿಂಡಿಮ, ಕರ್ನಾಟಕದ ವೈಭವಗಳ ಕುರಿತು, ಸಂಸ್ಕೃತಿಯ ಬಗ್ಗೆ, ಕನ್ನಡ ಭಾಷೆಯ ಸಮೃದ್ಧಿಯ ಕುರಿತು ಜನರಿಗೆ ತಿಳಿವಳಿಕೆ ಮೂಡಿಸುವ ನಮ್ಮ ಒಂದು ಪುಟ್ಟ ಪ್ರಯತ್ನ. ಕಾಲಕ್ರಮೇಣ ಈ ಪ್ರಯತ್ನ ಕರ್ನಾಟಕದ ಬಗೆಗಿನ ಅರಿವಿಗೆ, ಕನ್ನಡ ಭಾಷೆಯ ಬಗೆಗಿನ ತಿಳಿವಳಿಕೆಗೆ ಒಂದು ಮಾಹಿತಿ ಕೋಶವಾಗಬಲ್ಲುದು ಎಂಬ ಹೆಬ್ಬಯಕೆ. ಕನ್ನಡದ ಬಗ್ಗೆ ಕರ್ನಾಟಕದ ಬಗ್ಗೆ ತಿಳಿಯಲು ಬಯಸುವವರಿಗೆ ಒಂದು ಸೂಕ್ತ  ಅಂಕಣವಾಗಬೇಕೆಂಬ ಬಯಕೆ ಹೊತ್ತು ಬಂದಿದ್ದೇವೆ. ಈ ವೆಬ್ ಸೈಟಿನ ಹೆಸರೇ ಉಲ್ಲೇಖಿಸುವಂತೆ ಅಳಿವಿನ ಹಾದಿಯತ್ತ ಸಾಗುತ್ತಿರುವ ಕನ್ನಡ ಸಂಸ್ಕೃತಿಯನ್ನು ಜಾಗೃತಗೊಳಿಸಲು, ಕನ್ನಡಿಗರೆಲ್ಲರಿಗೂ ಅಂಥದ್ದೊಂದು ಸಾಂಸ್ಕೃತಿಕ ಎಚ್ಚರಕ್ಕೊಂದು ಧ್ವನಿಯಾಗಲೆಂಬ ಆಶಯದಿಂದ ರಾಷ್ಟ್ರಕವಿ ಕುವೆಂಪು ಬರೆದಿರುವ ’ಬಾರಿಸು ಕನ್ನಡ ಡಿಂಡಿಮವಾ.. ಓ ಕರ್ನಾಟಕ ಹೃದಯ ಶಿವಾ’ ಎಂಬ ಕವಿತೆಯ ಸಾಲಿನ್ನು ಬಳಸಿಕೊಂಡಿದ್ದೇವೆ.
-      ಜೈ ಕನ್ನಡಾಂಬೆ -